Share This Article To your Friends

ಇಡೀ ದೇಶವೇ ಖುಷಿಯಲ್ಲಿ ಇರುವಾಗ ಅವನೊಬ್ಬ ಮಾತ್ರ ಕಣ್ಣೀರು ಹಾಕುತ್ತಿದ್ದ..!


ಅದು 1947 ರ ವರ್ಷ... ರಾಜಕೀಯ ಅತಂತ್ರದೊಂದಿಗೆ ಭಿನ್ನಮತದ ತೀವ್ರ ನರ್ತನಕ್ಕೆ ನಲುಗಿಹೋಗಿತ್ತು.. ಭಾರತ ಮತ್ತು ಪಾಕಿಸ್ತಾನ ವಿಭಜನೆಗೊಳ್ಳದೇ ಬೇರೇ ವಿಧಿಯೇ ಇಲ್ಲ ಎಂಬಂಥ ಸನ್ನಿವೇಷಗಳು ಅದಾಗಲೇ ನಿರ್ಮಾಣಗೊಂಡಿದ್ದವು.. ಶಾಂತಿಯ ತೋಟದಲ್ಲಿ ರಕ್ತಕ್ರಾಂತಿ ಬೀಜಗಳು ಚಿಗುರೊಡೆದಿದ್ದವು.. ಉಗ್ರರ ಅಟ್ಟಹಾಸಕ್ಕೆ ಅದೆಷ್ಟೋ ಕುಟುಂಬಗಳು ನಲುಗಿ ಜೀವಬಿಟ್ಟಿದ್ದವು.  ಕುಟುಂಬವೊಂದರಲ್ಲಿ ತಂದೆ, ತಾಯಿ, ಅಣ್ಣ ಮತ್ತು ಸಹೋದರಿಯರ ರಕ್ತವನ್ನು ಕಣ್ಣಗಳು ಬರ್ಬರವಾಗಿ ನೆಲಕ್ಕೆ ಹರಿಸಿಬಿಟ್ಟಿದ್ದರು.. ಆ ಕುಟುಂಬದಲ್ಲಿ ಉಳಿದವನು ಒಬ್ಬನೇ ಒಬ್ಬ ಮಾತ್ರ.. ಸಾವಿನ ದವಡೆಯಯಿಂದ ತನ್ನ ಮಗನನ್ನು ಬದುಕಿಸಬೇಕು ಎನ್ನುವ ಹಂಬಲ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಆ ತಂದೆಗೆ ಇತ್ತು.. ರಕ್ತ ಸಮುದ್ರದಲ್ಲಿ ಮಲಗಿದ್ದ ಆ ತಂದೆ ತನ್ನ ಪುಟ್ಟ ಮಗನನ್ನು ಕಂಡು ಸಾವಿಗೂ ಮುನ್ನ ಕೂಗಿದ ಕಟ್ಟ ಕಡೆಯ ಪದಗಳೆಂದರೆ 'ಭಾಗ್ ಮಿಲ್ಖಾ ಭಾಗ್,'




ಹೌದು.. ಇದು ಮಿಂಚಿನ ಓಟಗಾರ ಎಂದು ಭಾರತಕ್ಕೆ ಖ್ಯಾತಿ ಗಳಿಸಿಕೊಟ್ಟ, ಚಿನ್ನದ ಪದಕಗಳ ಒಡೆಯ ಮಿಲ್ಖಾಸಿಂಗ್ ಬದುಕಿನಲ್ಲಿ ನಡೆದ ಕರಾಳ ಘಟನೆಗಳು.. ಮೌನ ಸ್ಮಶಾನದಲ್ಲಿ ರಕ್ತದ ಮಡುವಿನಲ್ಲಿ ಬಿದ್ದ ಶವಗಳನ್ನು ಕಣ್ಣಾರೆ ಕಂಡರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ ಪುಟ್ಟ ಬಾಲಕನದ್ದಾಗಿತ್ತು.. ತನ್ನ ಕಣ್ಮುಂದೆಯೇ ಕುಟುಂಬದವರೆಲ್ಲರೂ ವಿಲ ವಿಲನೆ ಒದ್ದಾಡಿ ಜೀವ ಬಿಟ್ಟರು. ಮಳೆ ಬಾರದೇ ಒಣಗಿದ್ದ ಬಿರುಕು ಭೂಮಿ ಆ ಜೀವಗಳ ಕೆಂಪು ರಕ್ತವನ್ನು ಹೀರಿ ತೃಪ್ತಿಪಡುತ್ತಿತ್ತು.. ತನಬ್ನ ದಾಹ ತೀರಿಸಿಕೊಳ್ಳುತ್ತಿತ್ತು. ಸಾವಿಗೂ ಮುನ್ನ ತಂದೆ ಹೇಳಿದ ಮಾತಿನಂತೆ ತನ್ನ ಜೀವ ಉಳಿಸಿಕೊಳ್ಳಲು ಆ ಹೆಣಗಳ ರಾಶಿಯನ್ನು ದಾಟಿ, ಅಂದು ಪಾಕಿಸ್ಥಾನದಿಂದ ಓಡಲು ಶುರು ಮಾಡಿದ..

ಸಾವಿನ ರುದ್ರಾಭಿಷೇಕದಿಂದ ಪಾರಾಗಲು ಓಡಿದ ಆ ಓಟ ಮುಂದೊಂದು ದಿನ ಭಾರತಕ್ಕೆ ಚಿನ್ನದ ಪದಕಗಳ ಸುರಿಮಳೆ ನೀಡುತ್ತೆ ಅಂತ ಆತ ಅಂದುಕೊಂಡಿರಲಿಲ್ಲ.. ಲಾಹೋರ್‌ನಿಂದ ತಪ್ಪಿಸಿಕೊಂಡು ದಿಲ್ಲಿಗೆ ಬಂದಾಗ ಆತನ ಹೊಟ್ಟೆ ಅನ್ನಕ್ಕಾಗಿ ಹಪಹಪಿಸುತ್ತಿತ್ತು.. ಆದರೆ ಊಟ ಕೊಡುವಷ್ಟು ವ್ಯವಧಾನವಗಲೀ, ಆ ಬಾಲಕನ ಕಷ್ಟಗಳಿಗೆ ಸ್ಪಂದಿಸುವ ಮನೋಸ್ಥೈರ್ಯವಾಗಲಿ ಅಲ್ಲಿ ಯಾರಿಗೂ ಇರಲಿಲ್ಲ.. ಕೊನೆಗೆ ಆತನ ಹೊಟ್ಟೆ ತುಂಬಿಕೊಂಡದ್ದು ಕೇವಲ ನೀರು ಮಾತ್ರ.. ಅದೂ ಶುದ್ಧತೆಗೆ ವ್ಯತಿರಿಕ್ತವಾದ ನೀರು.

ಮಿಲ್ಖಾಸಿಂಗ್ ಅಂದು ಕ್ರೂರಿಗಳ ಕೈಯಿಂದ ತಪ್ಪಿಸಿಕೊಂಡು ಬದುಕಿನ ಹೊಸ ಬೆಳಕಿಗಾಗಿ ಓಡಲು ಶುರು ಮಾಡಿದ. ಆ ಓಟವೇ ನಂತರದ ದಿನಗಳಲ್ಲಿ ಭಾರತಕ್ಕೆ ಚಿನ್ನದ ಪದಕಗಳನ್ನು, ಬೆಳ್ಳಿ ಪದಕಗಳನ್ನು ಗೆದ್ದು ಗೌರವ ತಂದುಕೊಟ್ಟಿತು. ಭಾರತಕ್ಕೇ ಭಾರತವೇ ಹೆಮ್ಮೆ ಪಡುವ ಸಮಯದಲ್ಲಿ ಮಿಲ್ಖಾಸಿಂಗ್ ಮಾತ್ರ ಮನದೊಳಗೇ ಮರುಗಿ ದುಃಖಿಸುತ್ತಾನೆ.. ಪದಕ ಗೆದ್ದಾಗಲೆಲ್ಲಾ ಮಿಂಚಿನ ಓಟದ ಸರದಾರನಿಗೆ ತಂದೆ ಅಂದು ಹೇಳಿದ ಕೊನೆಯ ಮಾತು ನೆನಪಾಗುತ್ತಲೇ ಇರುತ್ತದೆ. ಆ ಮಾತುಗಳು, ಅಂದು ಕಣ್ಣೆದುರೇ ಹತರಾದ ಕುಟುಂಬದವರ ಸಾವಿನ ದೃಶ್ಯಗಳನ್ನು ನೆನೆದರೆ ಈಗಲೂ ಮಿಲ್ಖಾಸಿಂಗ್ ಮನದ ಮೂಲೆಯಲ್ಲಿ ಭಯದ ನಡುಕ ಮನೆ ಮಾಡುತ್ತದೆ.. ಕಣ್ಣೀರು ನೆಲ ಮುಟ್ಟಿ ತಂಪನ್ನೀಯುತ್ತದೆ. ದೇಶವೇ ಹೆಮ್ಮೆಯಿಂದ ಅಭಿನಂದಿಸುತ್ತಿರುವಾಗ ಅವರು ಮಾತ್ರ ಅಳುವಿನ ಕಡಲಲ್ಲಿ ಈಜುತ್ತಿರುತ್ತಾರೆ. ಅಂದು ಬದುಕಲು ಓಡಲು ಶುರುಮಾಡಿದವನಿಗೆ, ನಂತರದಲ್ಲಿ ಓಡುವುದೇ ಬದುಕಾಗಿಹೋಗಿತ್ತು.

  'ಏಷ್ಯಾದಲ್ಲೇ ಅತ್ಯಂತ ವೇಗದ ಓಟಗಾರ' ಎಂದು ಕರೆಯಲ್ಪಡುತ್ತಿದ್ದ ಪಾಕಿಸ್ತಾನದ ಶ್ರೇಷ್ಠ ಅಥ್ಲೀಟ್ ಅಬ್ದುಲ್ ಖಾಲಿಕ್ ರನ್ನು ಬೆನ್ನಟ್ಟಿ ಓಟದಲ್ಲಿ ಬಗ್ಗು ಬಡಿದ ಆ ನೆನಪುಗಳನ್ನು ಮಿಲ್ಖಾಸಿಂಗ್ ಈಗಲು ರೋಷಾಗ್ನಿಯಿಂದ ನೆನೆಯುತ್ತಾರೆ. ಅಂದು ಮಿಂಚಿನ ವೇಗದ ಪ್ರದರ್ಶನ ನೀಡಿದ ಮಿಲ್ಖಾಸಿಂಗ್ ಗೆ, ಕುಟುಂಬದವರನ್ನು ಬಲಿ ತೆಗೆದುಕೊಂಡ ಪಾಪಿಗಳಿಗೆ ಸೋಲಬಾರದು ಎಂಬ ಛಲವಿತ್ತು.. ಮನದಲ್ಲಿ ಆ ಓಟದ ಮೀಟರ್ ವೇಗವಾಗಿ ಚಲಿಸತೊಡಗಿತ್ತು.. ಅಂದು ಮಿಲ್ಖಾಸಿಂಗ್ ತೋರಿದ ವೇಗದ ಓಟಕ್ಕೆ ಮೆಚ್ಚಿದ ಅಂದಿನ ಪಾಕ್ ಪ್ರಧಾನಿ 'ಫ್ಲೈಯಿಂಗ್ ಸಿಖ್' ಎಂದು ಕರೆದು ಗೌರವಿಸಿದರು.

ಹೆತ್ತವರನ್ನು ಕಳೆದುಕೊಂಡ ದೇಶದಲ್ಲೇ ಸಾಧನೆ ಮಾಡಿ ತೋರಿಸಿ ತೃಪ್ತಿಪಟ್ಟ ಮಹಾನ್ ಛಲಗಾರ ಮಿಲ್ಖಾಸಿಂಗ್ ಗೆ ಪಾಕಿಸ್ತಾನದ ಬಗ್ಗೆ ಬೇಸರವಿಲ್ಲ.. ಈಗಲೂ ಪಾಕಿಸ್ತಾನ ಹಾಗೂ ಭಾರತದ ನಡುವೆ ಸದಾ ಭ್ರಾತೃತ್ವ ಇರಲಿ ಎಂದು ಮನಃಪೂರಕವಾಗಿ ಆಶಿಸುತ್ತಾರೆ. ಇತ್ತೀಚೆಗಷ್ಟೇ ಮಿಲ್ಖಾಸಿಂಗ್ ಜೀವನ ಆಧಾರಿತ ಚಿತ್ರ “ಭಾಗ್ ಮಿಲ್ಖಾ ಭಾಗ್” ನಿಂದಾಗಿ ಮತ್ತೊಮ್ಮೆ ಬದುಕಿನ ಚಿತ್ರಗಳನ್ನು ಕಣ್ಮುಂದೆ ತಂದಿದ್ದಾರೆ ನಿರ್ದೇಶಕರು. ಇದನ್ನು ನೋಡಿದ “ಫ್ಲೈಯಿಂಗ್ ಸಿಖ್” ಗೆ ಮತ್ತೆ ನೋವಿನ ಕಣ್ಣೀರು ಮನತುಂಬಿ ಬಂದಿತ್ತು.

ಸಿನೆಮಾ ನೋಡಿ “ವಾಹ್ ಸೂಪರ್.. ಎಂಥಾ ಸೀನ್ ಗುರು” ಎಂದು ಹುಬ್ಬೇರಿಸುವ ಜನರು ಮಿಲ್ಖಾ ಬದುಕಿನ ಇಂಚಿಂಚು ನೋವನ್ನು ಅರ್ಥ ಮಾಡಿಕೊಂಡು ಅವರ ಸಾದನೆಯನ್ನು ಗೌರವಿಸಿದಾಗ ಮಾತ್ರ ಚಿತ್ರಕ್ಕೆ ಸಾರ್ಥಕತೆ ಸಿಗುತ್ತದೆ..

ಸಿನೆಮಾ ನೋಡಿ ಹೊರ ಬರುವಾಗ ಅದೆಷ್ಟೋ ಜನರು ಭಾವೋದ್ರೇಕಗೊಂಡು, ಅಚ್ಚರಿಗೊಂಡು ಹೊರಬರುತ್ತಿದ್ದಾರೆ.. “ಅಬ್ಬಾ ಅದೆಂಥಾ ಭಯಾನಕ ಬದುಕಿನ ಅನಾವರಣ ಮಾಡಿದ್ದಾರೆ ನಿರ್ದೇಶಕರು?” ಎಂದು ಅಚ್ಚರಿಯ ಜೊತೆಗೆ ಭಯವನ್ನೂ ವ್ಯಕ್ತಪಡಿಸುತ್ತಿದ್ದಾರೆ.. ನೋಡುಗರಿಗೆ ಅಷ್ಟೋಂದು ಕರುಳು ಹಿಂಡಿದೆ ಈ ಸಿನೆಮಾ ಎಂದರೆ ನಿಜ ಬದುಕಿನಲ್ಲಿ ಅನುಭವಿಸಿದವರ ಪಾಡೇನು? ಯೋಚಿಸಿ ನೋಡಿ..!ಇದು ಕಲ್ಪನೆಗೂ ಮೀರಿದ ಪ್ರೆಶ್ನೆ..!

ನೋವನುಂಡು ದೇಶಕ್ಕೆ ಕೀರ್ತಿ ಮಾಲೆಯನ್ನು ಹಾಕಿದ ವೀರ ಓಟಗಾರನಿಗೆ ನಾವೆಲ್ಲರೂ ನಿಜಕ್ಕೂ ಸಲಾಂ ಹೇಳಲೇಬೇಕು.. “ ಹ್ಯಾಟ್ಸ್ ಅಪ್ ಮಿಲ್ಖಾಸಿಂಗ್.. ಹ್ಯಾಟ್ಸ್ ಅಪ್..!

Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved