ಜೈನ ಧರ್ಮದ ಕೊನೆಯ ತೀರ್ಥಂಕರನಾದ ಮಹಾವೀರನು “ಚೈತ್ರ ಮಾಸದ ಶುಕ್ಲ ತ್ರಯೋದಶಿ”ಯಂದು ಕ್ರಿ.ಪೂ. 599 ರಲ್ಲಿ ಜನಿಸಿದನು. ಬಿಹಾರದ ಕುಂಡಲೀವನ ಈತನ ಹುಟ್ಟೂರು.ಮಹಾವೀರ ಜನಿಸಿದ ಈ ಶುಭ ದಿನವನ್ನು “ಮಹಾವೀರ ಜಯಂತಿ” ಎಂದು ಆಚರಿಸಲಾಗುತ್ತಿದೆ.ಮಹಾವೀರ ಜಯಂತಿಯಂದು ಜೈನ ಬಸದಿಗಳನ್ನು ಬಾವುಟಗಳಿಂದ ಅಲಂಕರಿಸಲಾಗುತ್ತದೆ. ಬೆಳಗಿನ ಸಮಯ ಮಹಾವೀರನ ಪ್ರತಿಮೆಗೆ ಅಭಿಷೇಕ ಮಾಡಲಾಗುತ್ತದೆ. ನಂತರ ಇದನ್ನು ತೊಟ್ಟಿಲಿನಲ್ಲಿಟ್ಟು ಮೆರವಣಿಗೆ ಕರೆದೊಯ್ಯಲಾಗುತ್ತದೆ. ಭಕ್ತಾದಿಗಳು ಅಕ್ಕಿ, ಹಣ್ಣು, ಹಾಲು, ನೀರು ಮೊದಲಾದುವನ್ನು ನೈವೇದ್ಯ ಮಾಡುತ್ತಾರೆ. ಪ್ರವಚನಗಳು, ಪ್ರಾರ್ಥನೆಗಳು ನಡೆಯುತ್ತವೆ. ಗೋರಕ್ಷಣೆಗಾಗಿ ಚಂದಾ ಎತ್ತಲಾಗುತ್ತದೆ. ಈ ದಿನದಂದು ಗುಜರಾತ್ ರಾಜ್ಯದ ಗೀರ್ನಾರ್ ಮತ್ತು ಪಲಿತಾನಾ ದಲ್ಲಿರುವ ಬಸದಿಗಳಿಗೆ ದೇಶದ ಎಲ್ಲೆಡೆಗಳಿಂದ ಭಕ್ತರು ಬರುತ್ತಾರೆ.