Share This Article To your Friends

ಕುಪೋಷಣೆಗೆ ಒಳಗಾದ ವಿದ್ಯಾವಂತರ ಮೆದುಳುಗಳು.




ಭಾರತ ವಿಶ್ವದ ಜ್ಞಾನ ಕಣಜ.. ಭಾರತೀಯ ವಿದ್ಯಾರ್ಥಿಗಳು ಮಾಹಿತಿ ಜಗತ್ತಿನ ಆಧಾರ ಸ್ಥಂಭಗಳು ಎಂದು ಸ್ವತಃ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾರವರೇ ಹಿಂದೊಮ್ಮೆ ಭಾರತಕ್ಕೆ ಭೇಟಿಯಿತ್ತಾಗ ಹೊಗಳಿ ಹೋಗಿದ್ದರು. ಅದರಲ್ಲೂ ಬೆಂಗಳೂರಿಗರು ಜ್ಞಾನ ಸಾಗರದ ಒಡೆಯರು ಎಂಬುದನ್ನು ಸ್ವತಃ ದೊಡ್ಡಣ್ಣನೇ ಒಪ್ಪಿಕೊಂಡಿದ್ದಾನೆ. 

ಭಾರತದಲ್ಲಿರುವ ಕೋಟ್ಯಾಂತರ ಜನರು ಈಗೀಗ ಅಕ್ಷರ ಬೆಳಕಿನಲ್ಲಿ ಆಶ್ರಯ ಪಡೆಯುತ್ತಿದ್ದಾರೆ.. ಐಟಿ ಬಿಟಿಗಳ ಮೂಲಕ ಮಾಹಿತಿ ವಿನಿಮಯದಲ್ಲಿ ಸಾಕಷ್ಟು ಕೊಡುಗೆಯನ್ನು ಭಾರತೀಯರು ನೀಡಿದ್ದಾರೆ. ತನ್ಮೂಲಕ ಭಾರತದ ಅಭಿವೃದ್ದಿಯಲ್ಲಿ ಸಹಭಾಗಿಗಳಾಗಿದ್ದಾರೆ. 

ಕೆಲವು ದಿನಗಳ ಹಿಂದೆ ಹವಾಮಾನದಲ್ಲಿ ಧಿಡೀರ್ ವೈಪರಿತ್ಯಗಳು ಕಾಣಸಿಗುವಂತೆ ಏಕಾಏಕಿ ಅಂತರ್ ರಾಷ್ಟ್ರೀಯ ಶೇರ್ ಮಾರ್ಕೇಟ್ ನಲ್ಲಿ ಧಿಡೀರ್ ವೈಪರಿತ್ಯಗಳು ಕಂಡುಬಂದವು. ಲಾಭದ ಕುದುರೆ ಏರಿದ್ದ ಅನೇಕ ಸಾಫ್ಟ್ ವೇರ್ ಕಂಪೆನಿಗಳು ತಮ್ಮ ಉದ್ಯೋಗಿಗಳ ವೇತನಕ್ಕೆ ಲಗಾಮು ಹಾಕಿದವು. ಅಷ್ಟೇ ಅಲ್ಲ, ಇನ್ನೂ ಅನೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ಮನೆಗಟ್ಟಿದವು. 

ಪಾರ್ಟಿ, ಪಬ್ಬು, ಶಾಪಿಂಗ್ ಅಂತ ಐಶಾರಾಮಿ ಬದುಕಿಗೆ ಒಗ್ಗಿಕೊಂಡಿದ್ದ ಅದೆಷ್ಟೋ ಜನರ ಬದುಕಿನ ಬಂಡಿಯ ಗಾಲಿಗಳು ತುಂಡರಿಸಿ ಹೋದವು. ಆ ದೇವರು ಮಾಡಿಟ್ಟ ವಿದ್ಯಾವಂತರ ಮೆದುಳು ವೈರಸ್ ಗೆ ತುತ್ತಾಯ್ತು. ಪರಿಣಾಮವಾಗಿ ಬದುಕಿಗೆಂದು ಭಗವಂತ ಮಾಡಿಟ್ಟ ಪ್ರೋಗ್ರಾಮ್ ಉಲ್ಟಾಪಲ್ಟಾ ಆಗಿಬಿಟ್ಟಿತು. ನೋಡ ನೋಡುತ್ತಿದ್ದಂತೆಯೇ ಬದುಕು ಹ್ಯಾಂಗಾಗಿ ಹೋಗಿಬಿಟ್ಟಿತ್ತು..

ಕೆಲಸ ಕಳೆದುಕೊಂಡ ನೋವು ಮುಂದಿನ ಬದುಕಿನ ಆಸೆಗಳನ್ನು ಕಮರಿಸಿಬಿಟ್ಟಿತ್ತು. ಹೀಗೆ ಉದ್ಯೋಗ ಕಳೆದುಕೊಂಡ ಗೆಳೆಯನೊಬ್ಬ ನೋವಿನಿಂದಲೇ ಮನೆಗೆ ಮರಳಿದ.. ಅವನು ಖಾಸಗೀ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ವ್ಯಕ್ತಿ.. ಆದರೆ ಅಂತರ್ ರಾಷ್ಟ್ರೀಯ ಮಾರುಕಟ್ಟೆಯ ಮೇಲಾದ ವೈರಸ್ ಅಟ್ಯಾಕ್ ಗೆ ಅವನ ಕೆಲಸ ತುತ್ತಾಗಿಬಿಟ್ಟಿತ್ತು. ಹೀಗಾಗಿ ಸಂಸ್ಥೆಯವರು ಅವನನ್ನು ಸಂಸ್ಥೆಯಿಂದ ಎರೇಸ್ ಮಾಡಿಬಿಟ್ಟಿದ್ದರು. 

ಇಷ್ಟಕ್ಕೇ ಬೇಸತ್ತ ಅವನು ಚಿಂತಾಕ್ರಾಂತನಾಗಿ ಕೂತುಬಿಟ್ಟ.. ಮುಂದಿನ ಬದುಕಿನ ಬಗ್ಗೆ ಆಲೋಚಿಸದೇ ಹಿಂದಿನ ಬದುಕಿನ ಕ್ಷಣಗಳನ್ನು ನೆನೆದು “ಅಯ್ಯೋ ಎಂಥಾ ಕೆಲಸ ಹೋಯ್ತಪ್ಪಾ” ಅಂತ ದುಃಖಿಸುತ್ತಿದ್ದ. ಅವನ ಮನಸ್ಸಿನ ತುಂಬ ಮೆದುಳಿನ ತುಂಬಾ ಅದೇ ತುಂಬಿಹೋಗಿತ್ತು.. ಸಾಧ್ಯವಾದಷ್ಟು ಸಮಾಧಾನ ಮಾಡಿ ಆವತ್ತು ರಾತ್ರಿ ಮನೆಗೆ ಬಂದೆ..
ಮರುದಿನ ಬೆಳಿಗ್ಗೆ ನಾನಿನ್ನು ಹಾಸಿಗೆಯಲ್ಲಿರುವಾಗಲೇ ನನ್ನ ಫೋನು ರಿಂಗಿಣಸಿತ್ತು.. ನಿದ್ದೆಗಣ್ಣಲ್ಲಿ ಯಾರದು ಅಂತ ನೋಡದೇ ನೇರವಾಗಿ ಕಿವಿಗಿಟ್ಟುಕೊಂಡು “ಹಲೋ..” ಎಂದೆ..

ಅತ್ತಿಂದ ಕೇಳಿದ್ದು ಅಳುವಿನ ಕೂಗು.. ಯಾರದು? ಏನಾಗಿದೆ? ಎಂದು ಧಿಗ್ಗನೇ ಎದ್ದು ನಂಬರ್ ನೋಡಿದೆ.. ಅದು ಗೆಳೆಯನ ಹೆಂಡತಿ ನಂಬರ್.. ಏನಾಯಿರು ಎಂದು ಎಷ್ಟು ಕೇಳಿದರ ಅತ್ತಿಂದ ಉತ್ತರವಿಲ್ಲದ ಅಳು ಮಾತ್ರವೇ ಪ್ರತಿಕ್ರಿಯೆಯಾಗಿತ್ತು.. “ಅರೇ... ಕೆಲಸ ಹೋಯ್ತು ಅಂತ ಫ್ರೆಂಡ್ ಏನಾದರೂ ಹೋಗಿಬಿಟ್ಟನಾ..?” ನನ್ನ ತಲೆಯಲ್ಲಿ ಇದೊಂದೇ ಪ್ರೆಶ್ನೆ...

ಸ್ವಲ್ಪ ಸುಧಾರಿಸಿಕೊಂಡು ಸಮಾಧಾನ ಮಾಡಿ “ಏನೂ ಆಗಲ್ಲ.. ಯಾಕಿಷ್ಟು ಅಳ್ತಿದೀರ.. ಏನಾಯಿತು?” ಅಂತ ಕೇಳಿದೆ.. “ಅವರಿಗೆ ಹಾರ್ಟ ಅಟ್ಯಾಕ್ ಆಗಿದೆ. ಆಸ್ಪತ್ರೆಲಿದೀವಿ. ಕೈಕಾಲೇ ಓಡ್ತಿಲ್ಲ ನನಗೆ.. ಪ್ಲೀಸ್ ಬೇಗ ಬರ್ತೀರ?” ಅಂತ ಹೇಳಿದ್ರು. ಬ್ರೇಕಿಂಗ್ ನ್ಯೂಸ್ ಇರಬಹುದು ಅಂತ ಅಂದುಕೊಂಡೆ.. ಜಸ್ಟ್ ಮಿಸ್ ಆಗಿ ಅದು ಶಾಕಿಂಗ್ ನ್ಯೂಸ್ ಆಗಿತ್ತು.. ಗೆಳೆಯನಿನ್ನೂ ಬದುಕೇ ಇದ್ದ..!! 

ಗೆಳೆಯನ ತಂದೆಯನ್ನು ಕರೆದುಕೊಂಡು ಬೈಕಿನಲ್ಲಿ ಆಸ್ಪತ್ರೆಗೆ ಧಿಡೀರ್ ಭೇಟಿಕೊಟ್ಟೆವು. ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ಗೆಳೆಯ.. ಪಕ್ಕದಲ್ಲಿ ದುಃಖಿಸುತ್ತಿದ್ದ ಗೆಳೆಯನ ಪತ್ನಿ.. ಸನ್ನಿವೇಷ ಕಣ್ಣೀರಿನ ನೋವನ್ನು ನಮ್ಮಲ್ಲೂ ತರಲೆತ್ನಿಸುವಂತಿತ್ತು.. ಬೆಡ್ ಮೇಲಿದ್ದ ಮಗನನ್ನು ನೋಡಿ ತಂದೆಗೂ ಪುತ್ರ ವಾತ್ಸಲ್ಯ ತುಂಬಿಬಂತು. ಆದರೂ ಅದಾವುದನ್ನೂ ಅಲ್ಲಿ ಪ್ರದರ್ಶಿಸಲಿಲ್ಲ.. ಮಗ ಮತ್ತು ಸೊಸೆಯನ್ನು ಮಾತಾಡಿಸಿ ಒಂಚೂರು ಧೈರ್ಯ ತುಂಬಿದರು.. ನಂತರ ನಾನು ಡಾಕ್ಟರ್ ಹತ್ರ ಹೋಗಿ ಏನಾಯಿತು? ಯಾಕಿಂಗಾಯಿತು ಅಂತ ಒಂಚೂರು ಇನ್ವೆಸ್ಟಿಗೇಷನ್ ಮಾಡಿದೆ.. ಡಾಕ್ಟರ್ ತಮ್ಮ ಇನ್ವೆಸ್ಟಿಗೇಷನ್ ರಿಪೋರ್ಟ ಅನ್ನು ಬಿಚ್ಚಿಟ್ಟರು. “ಅವರ ಮನಸ್ಸಿನಲ್ಲಿ ಏನೋ ಗಾಢವಾದ ನೋವಿದೆ..ಆ ನೋವಿನಿಂದಲೇ ಈ ಹಾರ್ಟ ಅಟ್ಯಾಕ್ ಆಗಿದೆ” ಅಂದುಬಿಟ್ಟರು..
 
ಹೌದು.. ಅವನ ಮನಸ್ಸಿನಲ್ಲಿ ಇದ್ದದ್ದು ಕೆಲಸ ಹೋಯ್ತಲ್ಲ ಅನ್ನೋ ಗಾಢ ನೋವು.. ಮುಂದಿನ ಬದುಕು ಹೇಗಪ್ಪಾ ಅನ್ನೋ ಆಲೋಚನೆ... ಇಬ್ಬರು ಮಕ್ಕಳನ್ನು ಹೇಗಪ್ಪಾ ಸಾಕೋದು ಅನ್ನೋ ಚಿಂತಾತ್ಮಕ ವೇದನೆ ಗೆಳಯನನ್ನು ಹಿಂಡಿ ಹಿಪ್ಪೆ ಮಾಡಿತ್ತು.. 

ಡಾಕ್ಟರ್ ಹತ್ತಿರ ಮಾತಾಡಿದ ನಂತರ ನೇರವಾಗಿ ಗೆಳೆಯನಿದ್ದ ವಾರ್ಡಗೆ ಹೋದೆ.. ಅವರ ತಂದೆ ಡಾಕ್ಟರ್ ಏನಂದ್ರಪ್ಪಾ? ಅಂತ ದುಗುಡದಲ್ಲಿಯೇ ಕೇಳಿದರು.. “ನೋಡಿ ಸರ್.. ನಿಮ್ಮ ಮಗನಿಗೆ ಕೆಲಸ ಹೋಯ್ತಲ್ಲಾ ಅನ್ನೋ ಚಿಂತೇನೇ ಜಾಸ್ತಿ ಆಗ್ಬಿಟ್ಟಿದೆ.. ಅದರ ಬಗ್ಗೆ ಜಾಸ್ತಿ ಯೋಚನೆ ಮಾಡಿ ಮಾಡಿ, ಮನಸ್ಸಿಗೆ ಹಚ್ಕೊಂಡಿದಾನೆ. ಅದಕ್ಕೆ ಹಾರ್ಟ ಅಟ್ಯಾಕ್ ಆಗಿದ್ಯಂತೆ.. ಡಾಕ್ಟರ್ ಹೇಳಿದ್ರು” ಅಂತ ಇದ್ದದ್ದು ಇದ್ದಂಗೆ ಗೆಳೆಯನ ಅಸಹಾಯತೆಯನ್ನು ಕಂಡು ಕೋಪದಲ್ಲಿ ಬೈದುಬಿಟ್ಟೆ..

ಆಗ ಆ ಮುದಿ ಜೀವ ವಾತ್ಸಲ್ಯಭರಿತವಾಗಿ ತನ್ನ ಕರುಳಿನ ಮಾತುಗಳನ್ನು, ಬದುಕಿನ ಅನುಭವಗಳನ್ನು ಬಿಚ್ಚಿಟ್ಟಿತು “ನೋಡಪ್ಪಾ.. ನೀನು ಓದಿರೋನು.. ಒಂದು ಕಂಪೆನಿ ನಿನ್ನನ್ನ ಕೆಲಸದಿಂದ ತೆಗೆದಾಕಿತು ಅಂತ ನಿನಗೆ ಬದುಕೇ ಇಲ್ಲಾ ಆಂತ ಅಂದುಕೊಳ್ತೀಯ ಯಾಕೆ? ನಾನೇನಾದರೂ ನಿನ್ನಂತೆ ಯೋಚನೆ ಮಾಡಿದ್ರೆ ನಾನು ತಿಂಗಳಿಗೊಮ್ಮೆ ಸಾಯುತ್ತಿದ್ದೆ.. ನಾನು ಕೂಲಿ ಮಾಡಿ ನಿನ್ನ, ನಿನ್ನ ತಮ್ಮನ್ನ, ನಿನ್ನ ಅಕ್ಕನನ್ನ ಸಾಕಿದ್ದೀನಿ.. ಓದಿಸಿದ್ದೀನಿ.. ಒಂದು ಕಡೆ ಬಿಲ್ಡಿಂಗ್ ಕಟ್ಟೋದು ಮುಗೀತು ಅಂದ್ರೆ ಮತ್ತೊಂದು ಕಡೆ ಎಲ್ಲಾದ್ರೂ ಕೆಲಸ ಹುಡುಕಿಕೊಂಡು ಹೋಗ್ತಿದ್ದೆ.. ಅಲ್ಲಿ ಸ್ವಲ್ಪ ದಿನ ಕೆಲಸ ಮಾಡಿ ಅದು ಮುಗಿದ್ಮೇಲೆ ಇನ್ನೊಂದುಕಡೆ.. ಹೀಗೆ ತಿಂಗಳಿಗೊಮ್ಮೆ, ವಾರಕ್ಕೊಮ್ಮೆ ಕೆಲಸ ಹೋಗ್ತಿತ್ತು ನಂದು.. ಆದ್ರೂ ನಿಮ್ಮನ್ನ ನಾನು ಸಾಕಲಿಲ್ಲವಾ? ಓದದೇ ಇರೋ ನಾನೇ ಮೂರು ಮಕ್ಕಳನ್ನು ಸಾಕಿದ್ದೀನಿ.. ಓದಿಸಿ ಮದುವೆ ಮಾಡಿದೀನಿ.. ಇನ್ನು ಓದಿ ವಿದ್ಯಾವಂತನಾಗಿರೋ ನೀನು ನಿನ್ನ ಎರಡು ಮಕ್ಕಳನ್ನು ಸಾಕೋದಕ್ಕೆ ಆಗೋದಿಲ್ವಾ? ಯೋಚನೆ ಮಾಡು..!! ಕೆಲಸ ಹೋಯ್ತು ಅಂತ  ಮನಸ್ಸಿಗೆ ಹಚ್ಕೊಂಡು ಕೂತರೇ ಎಲ್ಲವೂ ಸರಿ ಹೋಗುತ್ತಾ? ಯೋಚನೆ ಮಾಡ್ಬೇಕು.. ಆದರೆ ಹಿಂದಿನ ಕೆಲಸ ಹೋಯ್ತು ಅಂತಲ್ಲಾ.. ಮುಂದೆ ಇದಕ್ಕೆ ಬದಲಾಗಿ ಏನು ಮಾಡಬೇಕು, ಹೇಗೆ ಬದುಕೋದು ಅನ್ನೋದನ್ನು ಯೋಚನೆ ಮಾಡ್ಬೇಕು.. ಓದದೇ ಇರೋ ನಾನೇ ಇಷ್ಟೋಂದು ಯೋಚನೆ ಮಾಡ್ತೀನಿ.. ಮತ್ತೆ ನೀನ್ ಯಾಕಪ್ಪಾ ಇದನ್ನು ಅರ್ಥ ಮಾಡ್ಕೊಳ್ತಿಲ್ಲ.. ಚಿಂತೆ ಮಾಡ್ಬೇಡ ಬಾ.. ನೀನ್ ಚೆನ್ನಾಗಿದ್ರೆ ಸಾಕು,, ನನ್ನಲ್ಲಿ ಇನ್ನು ಶಕ್ತಿ ಇದೆ.. ನಾನು ನಿನ್ನನ್ನು ಸಾಕ್ತೀನಿ” ಅಂತ ಪುತ್ರನ ಮನಸ್ಸಿಗೆ ಸಮಾಧಾನದ ನುಡಿಗಳನ್ನು ಉಣಬಡಿಸಿದ. 

ಹೌದು.. ತಂದೆಯ ಮಾತು ಆಗ ಅತನ ಕಿವಿಗೆ ನಾಟಿತ್ತು.. ಅಷ್ಟೇ ಅಲ್ಲ, ನನಗೂ ಆ ಮಾತುಗಳು ಉಳಿ ಪೆಟ್ಟಿನಂತೆ ಕೇಳಿಬಂದವು.. ಏನೂ ಓದದ ನಮ್ಮ ಪೂರ್ವಿಕರೇ ಎಂಟು ಹತ್ತು ಮಕ್ಕಳನ್ನು ಸಾಕಿದ್ದಾರೆ.. ಯಾವ ಕೆಲಸ ಇಲ್ಲದಿದ್ದರೂ ನಮ್ಮನ್ನು ಬದುಕಿನ ದಡಕ್ಕೆ ತಲುಪಿಸಿದ್ದಾರೆ,.. ಕೂಲಿ-ನಾಲಿ ಮಾಡಿ, ಹೊಟ್ಟಗೆ ಒಂದಿಟ್ಟು ಊಟ, ತಲೆಗೆ ಒಂದಿಷ್ಟು ಜ್ಞಾನವನ್ನು ತುಂಬಿದ್ದಾರೆ. ಹೀಗಿರುವಾಗ ಓದಿ ವಿದ್ಯಾವಂತರಾದ ಇಂದಿನ ಬಹುತೇಕರು ಯಾಕೆ ಹೀಗೆ ಆಲೋಚಿಸೋದಿಲ್ಲ.? ಓದದೇ ಇರುವವರು “ ಏನೂ ಓದದೇ ಇದ್ದರೂ ನಾನು ಬದುಕನ್ನು ಸಮರ್ಥವಾಗಿ ಎದುರಿಸುತ್ತೇನೆ.. ಇನ್ನೇನಾದರೂ ಒಂಚೂರು ಓದಿದ್ರೆ ದೇಶವನ್ನೇ ಆಳುತ್ತಿದ್ದೆ” ಎಂದು ಗರ್ವ ಪಡುತ್ತಾರೆ.. ಓದದೇ ಇರುವವರು ಇಷ್ಟೋಂದು ಗರ್ವದ ಬದುಕನ್ನು, ಹೆಮ್ಮೆಯ ನಿರಾಳತೆಯ ಜೀವನವನ್ನು ನಡೆಸುತ್ತಿರಬೇಕಾದರೇ ವಿದ್ಯಾವಂತರಾದವರೇಕೆ ಇಂಥಾ ದೃಢ ನಿರ್ಧಾರಗಳನ್ನು ಕೈಗೆತ್ತಿಕೊಳ್ಳುವುದಿಲ್ಲ..? ಯಾಕೆ ಒಂದೇ ವಿಚಾರವನ್ನು ಗಾಢವಾಗಿ ಪರಿಗಣಿಸಿ ಬದುಕನ್ನ ಕತ್ತಲೆಯ ಕೂಪಕ್ಕೆ ಕೊಂಡುಯ್ಯುತ್ತಾರೆ? 

ಈಗಲೂ ಕೋಟ್ಯಾನು ಕೋಟಿ ಜನರು ಅಕ್ಷರತೆಯಿಂದ ದೂರ ಉಳಿದು ತುತ್ತು ಅನ್ನವನ್ನು ಅರಸಿ ಕೂಲಿಯತ್ತ ಮುಖ ಮಾಡಿದ್ದಾರೆ. ಪ್ರತಿ ವಾರಕ್ಕೂ ಅವರ ಉದ್ಯೋಗ ಕಳೆದು ಹೋಗುತ್ತದೆ.. ಪ್ರತಿ ವಾರವೂ ಒಂದೊಂದು ಹೊಸ ಉದ್ಯೋಗವನ್ನು ಅವರು ಅನಿವಾರ್ಯವಾಗಿ ಅರಸಿಕೊಳ್ಳಲೇ ಬೇಕು.. ಅವರೇ ನಿರಾಳತೆಯ ಬದುಕಿನಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.. ಮತ್ತೆ ವಿದ್ಯಾವಂತರೇಕೆ ಅವಿದ್ಯಾವಂತರಿಗೂ ಕಡೆಯದಾಗಿ ಬದುಕನ್ನು ದೂಡುತ್ತಿದ್ದಾರೆ..?? ಏನಾದಗಿದೆ ವಿದ್ಯಾವಂತರಿಗೆ..??
 
ಯಸ್... ಅವರ ಮೆದುಳು ಕುಪೋಷಣೆಗೆ ಒಳಗಾಗಿದೆ.. ವಿದ್ಯಾವಂತರ ಮೆದುಳು ಅಕ್ಷರಶಃ ಕುಪೋಷಣೆಯಗೆ ಬಲಿಯಾಗಿದೆ.. ನೋಡಲು ಮಾತ್ರ ಬೌದ್ಧಿಕತೆಯನ್ನು ಮೈಗೂಢಿಸಿಕೊಂಡ ಮೆದುಳಿನಲ್ಲಿ, ಬದುಕಿಗೆ ಬೇಕಾದಂತಹ ಪೋಷಣೆಯುಕ್ತ ವಿಟಮಿನ್ ಗಳು ಇಲ್ಲ.. ಬದಲಾಗಿ ಅಸೀಮಿತ ಕಲ್ಪನೆಗಳ ಭಾವೋದ್ವೇಗಗಳು ಮಿದುಳನ್ನು ಕಿತ್ತು ತಿನ್ನುವ ವೈರಸ್ ಗಳಾಗಿ ಮಾರ್ಪಡುತ್ತಿವೆ.. ಇದು ಇಡೀ ಮನುಜ ಕುಲವೇ ಆತಂಕ ಪಡುವಂತೆ ಮಾಡಿದೆ. ವಿದ್ಯಾವಂತರ ಅಸಾಧಾರಣ ಮೆದುಗಳನ್ನು ಅವಿದ್ಯಾವಂತರ ಮೆದುಳುಗಳಿಗೆ ಹೋಲಿಸಿದರೆ, ಅವಿದ್ಯಾವಂತರ ಮೆದುಳುಗಳು ಮನಸ್ಸನ್ನು ಸ್ಥಿಮಿತದಲ್ಲಿ ಇರಿಸಿಕೊಂಡು ಬದುಕಿನ ಏರಿಳಿತಗಳ ಭಾವೋದ್ವೇಗಗಳಿಗೆ ಸೂಕ್ತವಾಗಿ ಸ್ಪಂದಿಸುಷ್ಟು ಸಾಮರ್ಥ್ಯವನ್ನು ಹೊಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ.. 








ಶೇಖ್(ಸ್ಪಿಯ)ರ‍್
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved